ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಗಿಡ,ಮರಗಳನ್ನು ಬೆಳೆಸುವುದು ಅತ್ಯಗತ್ಯ : ಹೆಚ್‌. ಜಿ.ಕುಮಾರಸ್ವಾಮಿ

ಚಾಮರಾಜನಗರ:ಫೆ-20: ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಗಿಡ,ಮರಗಳನ್ನು ಬೆಳೆಸುವುದು ಪ್ರಸಕ್ತ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷರಾದ ಹೆಚ್‌. ಜಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಬಿ.ಆರ್.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಪತಂಜಲಿ ಯೋಗ ಅನ್ವೇಷಣೆ ಕೇಂದ್ರ, ಎನ್‌, ಎಸ್‌,ಎಸ್‌ ಯುನಿಟ್ ವತಿಯಿಂದ ಸಾಲು ಗಿಡಗಳಿಗೆ ನೀರು ಹಾಕುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಸಂಸ್ಥೆಯು ಯೋಗದ ಶಿಕ್ಷಣದ ಜೊತೆಗೆ ಸಾರ್ವಜಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸೇವೆಗಳನ್ನು ಮಾಡುತ್ತಾ ಬಂದಿದೆ. ಸಾಲುಮರದ ವೆಂಕಟೇಶ್‌ ಅವರು ನಗರ ಸೇರಿದಂತೆ ವಿವಿದೆಡೆ ಸಾಲುಗಿಡಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಈ ಸಾಲು ಗಿಡಗಳು ಬೆಳೆಯಲು ನೀರಿನ ಅಗತ್ಯ ವಿರುತ್ತದೆ. ಆದ್ದರಿಂದ ನಮ್ಮ ಸಮಿತಿ ವತಿಯಿಂದ ಒಂದು ಟ್ಯಾಂಕರ್ ನೀರನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳೆಸಲಾಗುತ್ತಿರುವ ಗಿಡಗಳಿಗೆ ನೀರಾಕುವ ಕೆಲಸ ಮಾಡುತ್ತಿದ್ದೇವೆ ಎಂದರು.

ಪ್ರತಿಯೊಬ್ಬರು ನಿಮ್ಮ ಮನೆ,ಅಂಗಡಿಗಳ ಮುಂದೆ ಇರುವ ಗಿಡಗಳಿಗೆ ನೀರು ಹಾಕುವ ಮೂಲಕ ಬೆಳೆಸಬೇಕು ಆ ಮೂಲಕ ಉತ್ತಮ ಗಾಳಿ, ವಾತಾವರಣ ಸೃಷ್ಠಿ ಮಾಡಬೇಕು ಎಂದು ಸಲಹೆ ನೀಡಿದರು.

ಸಾಲುಮರದ ವೆಂಕಟೇಶ್ ಮಾತನಾಡಿ, ಬೇಸಿಗೆಯಲ್ಲಿ ಗಿಡಗಳಿಗೆ ಕಡ್ಡಾಯವಾಗಿ ನೀರನ್ನು ಹಾಕಬೇಕಾಗುತ್ತದೆ. ಸಾರ್ವಜನಿಕರು ಪರಿಸರ ಉಳಿಸುವ ನಿಟ್ಟಿನಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸಂಚಾಲಕ ನಿಜಗುಣ ಮಾತನಾಡಿ ಚಾಮರಾಜನಗರ ಪಟ್ಟಣದಲ್ಲಿ ೫,ಶಾಖೆಗಳಲ್ಲಿ ಉಚಿತವಾಗಿ ಯೋಗ ಶಿಕ್ಷಣವನ್ನು ಹೇಳಿಕೊಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರಾದ ಲೋಕೇಶ್‌, ಶ್ರೀಕಾಂತ, ಗೌರಿ, ನಾಗಮಣಿ, ಲಕ್ಷ್ಮಿ, ಅಶ್ವಿನಿ,ನಂದಿನಿ, ಸುಕನ್ಯಾ, ಶುಭ, ಶಂಕರಮ್ಮ, ಮಮತ, ಕಲಾ ಹಾಗೂ ಇನ್ನು ಮುಂತಾದವರು ಇದ್ದರು