*ವಿದ್ಯಾರ್ಥಿಗಳು ಡಾ. ಬಿ.ಆರ್. ಅಂಬೇಡ್ಕರ್ ಜೀವನ, ಸಾಧನೆಗಳನ್ನು ಅರಿಯಬೇಕು : ಎಚ್.ಎನ್. ಸ್ವಾಮಿ*
ಚಾಮರಾಜನಗರ, ಫೆಬ್ರವರಿ 25 :- ಬಹು ವೈವಿಧ್ಯಮಯ ಸಂಸ್ಕøತಿ ಹೊಂದಿರುವ ಭಾರತದಲ್ಲಿ ಸಂವಿಧಾನದಡಿ ಎಲ್ಲಾ ನಾಗರಿಕರಿಗೆ ಏಕತೆಯಿಂದ ಬದುಕಲು ಭದ್ರನೆಲೆ ಒದಗಿಸಿಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ-ಸಾಧನೆಗಳನ್ನು ಇಂದಿನ ವಿದ್ಯಾರ್ಥಿಗಳು ಓದುವ ಮೂಲಕ ಅರಿಯಬೇಕಿದೆ ಎಂದು ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್.ಎನ್. ಸ್ವಾಮಿ ಅವರು ತಿಳಿಸಿದರು.
ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಓದು ಬಹಳ ಮಹತ್ವಪೂರ್ಣ ಕಾರ್ಯಕ್ರಮವಾಗಿದೆ. ಸಂಸ್ಕಾರವಿದ್ದರೆ ಇಡೀ ಜಗತ್ತೇ ಗೌರವ ನೀಡಲಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು. ಇಡೀ ಜಗತ್ತು ಗುರುತಿಸಿರುವ ಶ್ರೇಷ್ಠ ವ್ಯಕ್ತಿತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರದ್ದು. ಅಂಬೇಡ್ಕರ್ ಬದುಕಿದ್ದ 65 ವರ್ಷಗಳಲ್ಲಿ 33 ವರ್ಷ ಅಧ್ಯಯನದಲ್ಲಿಯೇ ತೊಡಗಿದ್ದರು. ಅವರ ಜೀವನ ಸಾಧನೆಗಳನ್ನು ಅರ್ಥೈಸಿಕೊಂಡರೆ ಮಾತ್ರ ವಿದ್ಯಾರ್ಥಿ ಜೀವನ ಪರಿಪೂರ್ಣ ಹಂತ ತಲುಪಲು ಸಾಧ್ಯವಾಗಲಿದೆ ಎಂದರು.
ಜ್ಞಾನದ ಹಸಿವಿದ್ದ ಅಂಬೇಡ್ಕರ್ ಅವರು ತಮಗೆ ದೊರಕುತ್ತಿದ್ದ 2 ರೂ. ಗಳಲ್ಲಿ 1 ರೂ. ಊಟಕ್ಕೆ ವ್ಯಯಿಸಿದರೆ ಮತ್ತೊಂದು ರೂ. ನಲ್ಲಿ ಪುಸ್ತಕ ಕೊಳ್ಳುತ್ತಿದ್ದರು. ತಮ್ಮ ಮನೆಯಲ್ಲಿ 51 ಸಾವಿರ ಪುಸ್ತಕಗಳ ಬೃಹತ್ ಗ್ರಂಥಾಲಯವನ್ನು ಹೊಂದಿದ್ದರು. ಜೊತೆಗೆ ಸಮಯದ ಮೌಲ್ಯವನ್ನು ಅರಿತಿದ್ದ ಅಂಬೇಡ್ಕರ್ ಒಂದು ಕ್ಷಣ ವ್ಯರ್ಥ ಮಾಡದ ಮಾದರಿಯನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾಗಿದೆ. ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿ, ಆ ಮೂಲಕ ದೇಶದ ಎಲ್ಲಾ ರಂಗಗಳ ಅಭಿವೃದ್ಧಿಗೆ ಕೊಡುಗೆ ನೀಡಿದ ಅಂಬೇಡ್ಕರ್ರವರ ಜೀವನ, ಸಾಧನೆಗಳನ್ನು ಓದುವ ಮೂಲಕ ಪ್ರತಿಯೊಬ್ಬರು ಅರಿತು ಕೊಳ್ಳಬೇಕಾಗಿದೆ ಎಂದು ಎಚ್.ಎನ್. ಸ್ವಾಮಿ ಅವರು ತಿಳಿಸಿದರು.
ಜೆ.ಎಸ್.ಎಸ್. ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ. ಎನ್. ಮಹದೇವಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಜಾತೀಯ ಅಸಮಾನತೆ ಕಿತ್ತೊಗೆದು ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಮೂಲಕ ಜಗತ್ತಿಗೆ ಚಲನಶೀಲ ಸಮಾಜದ ಪರಿಕಲ್ಪನೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ. ದೇಶದ ಅಸಮಾನತೆ ಸಮಸ್ಯೆಗೆ ಪರಿಹಾರ ಕಂಡುಹಿಡಿದ ಅಂಬೇಡ್ಕರ್ ಅವರ ಬದುಕು, ಸಾಧನೆ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದ ಮೂಲಕ ರಚನಾತ್ಮಕ ಸಮಾಜಕ್ಕೆ ಅಡಿಪಾಯ ಹಾಕಿದ ಅಂಬೇಡ್ಕರ್ ಅವರ ಅದರ್ಶ ಮೌಲ್ಯಗಳ ಬಗ್ಗೆ ಚಿಂತನೆಗಳು ಹೆಚ್ಚಾಗಿ ಆಗಬೇಕು ಎಂದರು.
ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯ್ಕುಮಾರ್ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಲೆ, ಸಾಹಿತ್ಯ, ಸಂಸ್ಕøತಿ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ವಿಶ್ವಕೋಶ ಎನಿಸಿಕೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ವಿದ್ಯಾರ್ಥಿಗಳಿಗೆ ಪೂರ್ಣ ಮಾಹಿತಿಯ ಅರಿವು ಮೂಡಿಸಲು ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಪ್ರತಿವರ್ಷ ಏರ್ಪಡಿಸಲಾಗುತ್ತಿದೆ. ಕಾರ್ಯಕ್ರಮದ ಸದ್ಭಳಕೆ ಇಲಾಖೆಯ ಸದುದ್ದೇಶವಾಗಿದೆ ಎಂದರು.
ಇದೇ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅಂತರ ಕಾಲೇಜು ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಆಶುಭಾಷಣ, ಕವನ ವಾಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ, ಜೆ.ಎಸ್.ಎಸ್. ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎ.ಆರ್. ಸುಷ್ಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ