ಉತ್ತಮ ನಾಗರೀಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು… ಎಂ. ಎಲ್. ಸಿ. ಪುಟ್ಟಣ್ಣ

ದೊಡ್ಡಬಳ್ಳಾಪುರ:ಕರ್ನಾಟಕ ರಾಜ್ಯದ ಶಿಕ್ಷಕರ ಮತ್ತು ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಹೋರಾಟ ಮಾಡೋಣ ಎಂದು ವಿಧಾನ ಪರಿಷತ್ತು ಸದಸ್ಯ ಪುಟ್ಟಣ್ಣ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ನಗರದ ಶ್ರೀ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರ ಸಮಾಜದ ಪ್ರಮುಖ ಅಂಗ ವಾಗಿದ್ದೂ, ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಅವರ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಶಿಕ್ಷಕ ಕ್ಷೇತ್ರ ದ ಪ್ರತಿನಿಧಿಯಾದ ನಾನು ಸದಾ ನಿಮ್ಮ ಜತೆಯಲ್ಲಿ ಇರುತ್ತೇನೆ. ಜನರು ದೇವಾಲಯಗಳನ್ನು ಕಟ್ಟುವ ಉತ್ಸಾಹವನ್ನು ಶಾಲಾ ಕಾಲೇಜುಗಳನ್ನು ಕಟ್ಟುವ ಕಡೆಗೆ ನೀಡಬೇಕಾಗಿದೆ ಎಂದರು.

ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಿ.ಕೆ.ಸರಸ್ವತಿ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ದ ಗೊಳಿಸಲು ಸ್ಮಾರ್ಟ್ ಕ್ಲಾಸ್ ತರಗತಿಗಳ ಅಗತ್ಯವಿದೆ. ಆದ್ದರಿಂದ ವಿಧಾನ ಪರಿಷತ್ತು ಸದಸ್ಯರಾದ ಪುಟ್ಟಣ್ಣ ಅವರು ತಮ್ಮ ಶಾಸಕರ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ನಿರ್ಮಿಸಿ ಮಾಡಿ ಕೊಡಬೇಕೆಂದರು

ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಬೋರಪ್ಪ ಮಾತನಾಡಿ, ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಇಡಿ ರಹಿತ ಉಪನ್ಯಾಸಕರುಗಳಿಗೆ ವೇತನ ಸಹಿತವಾಗಿ ಬಿ.ಇಡಿ ವ್ಯಾಸಂಗ ಮಾಡಲು ಸರ್ಕಾರ ಅನುಮತಿ ನೀಡಬೇಕಾಗಿದೆ. ನೂರಾರು ಮಂದಿ ಬಿ.ಇಡಿ ರಹಿತ ಉಪನ್ಯಾಸಕರು ಪ್ರಸ್ತುತ ಆತಂಕದ ಸ್ಥಿತಿಯಲ್ಲಿದ್ದಾರೆ. ವಿಧಾನ ಪರಿಷತ್ತು ಸದಸ್ಯರುಗಳು ಬಿ.ಇಡಿ ರಹಿತರ ಸಮಸ್ಯೆಯನ್ನು ಬಗೆಹರಿಸಲು ಸಹಕಾರ ನೀಡಬೇಕೆಂದರು.

ಈ ಕಾರ್ಯಕ್ರಮದಲ್ಲಿ ಶ್ರೀ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಆರ್.ವೇಣುಗೋಪಾಲ್, ದೊಡ್ಡಬಳ್ಳಾಪುರ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸುಬ್ರಹ್ಮಣ್ಯ, ಕಾರ್ಯದರ್ಶಿ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ರಾಜಶೇಖರ್, ಕಾರ್ಯದರ್ಶಿ ಧನಂಜಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಆರ್.ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಶಿಕ್ಷಕ‌ ಮತ್ತು‌ ಉಪನ್ಯಾಸಕರ ಸಂಘಟನೆಗಳ ಪದಾಧಿಕಾರಿಗಳಾದ ರಾಮಚಂದ್ರಗೌಡ, ಮುನಿಕೃಷ್ಣಪ್ಪ, ಅರುಣ್ ಕುಮಾರ್, ಜೈಕುಮಾರ್, ಬಿ.ಆರ್.ನರಸಿಂಹಮೂರ್ತಿ, ದಾಕ್ಷಾಯಿಣಿ, ಟಿ.ಕೆ.ಪ್ರಕಾಶ್, ಚಿಕ್ಕಗೌಡ, ಎ.ವಿ.ಚಂದ್ರಪ್ಪ, ಬಸವಲಿಂಗಯ್ಯ, ಮಹೇಶ್, ಸರಸ್ವತಿ , ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಭಾಗವಹಿಸಿದ್ದರು.