ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ವೀರಗಲ್ಲು ಪತ್ತೆ
ದೊಡ್ಡಬಳ್ಳಾಪುರ :ದೊಡ್ಡಬಳ್ಳಾಪುರ ತಾಲ್ಲೂಕು
ದೊಡ್ಡಬೆಳವಂಗಲ ಹೋಬಳಿ ಹುಲಿಕುಂಟೆ ಗ್ರಾಮದಲ್ಲಿ ಸಂಶೋದನೆಯಲ್ಲಿ ತೊಡಗಿದ್ದಾಗ ವೀರಗಲ್ಲು ಕಂಡುಬಂದಿದೆ.ತಾಲೂಕಿನ ಇತಿಹಾಸ ತಜ್ಞ ಡಾ.ಎಸ್ ವೆಂಕಟೇಶ್ ಅವರು ಹೇಳುವಂತೆ ಹುಲಿ ಬೇಟೆಯ ವೀರಗಲ್ಲುಗಳು ದೊರೆತಿರುವುದು ತೀರಾ ವಿರಳ. ತೂಬಗೆರೆ ಹೋಬಳಿಯ ತಿಮ್ಮಾಜನಹಳ್ಳಿಯಲ್ಲಿ ಎರಡು ಮತ್ತು ಎಸ್ ಎಸ್ ಘಾಟಿಗೆ ಸಂಪರ್ಕಿಸುವ ದಾರಿಯಲ್ಲಿ ನೆಲ್ಲುಗುದಿಗೆ. ಗ್ರಾಮದಲ್ಲಿ ಒಂದು ಹುಲಿ ಬೇಟೆ ಮಹಿಳಾ ವೀರಗಲ್ಲುಗಳು ಲಭ್ಯವಾಗಿವೆ.
ಇವುಗಳ ಜೊತೆಗೆ ಈಗ ಹೊಸದಾಗಿ ಸೇರ್ಪಡೆಯಾಗಿ ಡಾ. ವೆಂಕಟೇಶ್ ಅವರ ಕ್ಷೇತ್ರ ಕಾರ್ಯದಲ್ಲಿ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದಲ್ಲಿ ಹುಲಿ ಬೇಟೆಯ ವೀರ ಗಲ್ಲೊಂದು ಲಭ್ಯವಾಗಿದೆ. ಶಿಲ್ಪ ಲಕ್ಷಣದ ಆಧಾರದ ಮೇಲೆ ಇದನ್ನು 10 ನೇ ಶತಮಾನಕ್ಕೆ ಸೇರಿಸಬಹುದು ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ. ವೆಂಕಟೇಶ್ ತಿಳಿಸಿದ್ದಾರೆ
ವೀರನು ಆಲೀಢಭಂಗಿಯಲ್ಲಿ ನಿಂತಿದ್ದು, ತನ್ನ ಬಲಗೈಯಲ್ಲಿ ಖಡ್ಗವನ್ನು ಹಿಡಿದು ಮೇಲೆತ್ತಿರುವನು. ಎದುರುಗಡೆ ವೀರನತ್ತ ಮುನ್ನುಗ್ಗುತ್ತಿರುವ ಹುಲಿಯ ಚಿತ್ರಣವಿದೆ. ಈ ವೀರಗಲ್ಲಿನ ಮೇಲೆ ಯಾವುದೇ ರೀತಿಯ ಬರವಣಿಗೆ ಇಲ್ಲ. ಒಟ್ಟಾರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈವರೆಗೆ ನಾಲ್ಕು ಹುಲಿ ಬೇಟೆ ವೀರಗಲ್ಲುಗಳು ಲಭ್ಯವಾಗಿವೆ
ಮಾನವ ಮತ್ತು ಹುಲಿಗಳ ಸಂಘರ್ಷ ಇಂದು ನಿನ್ನೆಯಿಂದಲ್ಲ ಇತಿಹಾಸ ಪೂರ್ವ ಕಾಲದಿಂದಲೂ ಮಾನವ ನಿರಂತರವಾಗಿ ಹುಲಿಗಳ ಜೊತೆಗೆ ಸಂಘರ್ಷ ಮಾಡಿಕೊಂಡು ಬಂದಿದ್ದಾನೆ. ಹೀಗೆ ಹುಲಿ ಜೊತೆಗೆ ಕಾದಾಡುವಾಗ ಮೃತಪಟ್ಟ ವೀರನ ಸ್ಮರಣಾರ್ಥ ನೆಟ್ಟ ಕಲ್ಲುಗಳಿಗೆ ಹುಲಿ ಬೇಟೆ ವೀರಗಲ್ಲುಗಳು. ಇಂತಹ ಸ್ಮಾರಕ ಶಿಲ್ಪಗಳಿಂದ ಹುಲಿಗಳ ವಾಸ ಸ್ಥಾನದ ಕುರಿತಂತೆ ಅಧ್ಯಯನ ಮಾಡುವುದಕ್ಕೆ ಸಾದ್ಯವಿದೆ. ಬ್ರಿಟಿಷ್ ಆಡಳಿತದ ಅವಧಿಯವರೆಗೆ ಈ ಭಾಗದಲ್ಲಿ ಹುಲಿಗಳಿದ್ದ ಮಾಹಿತಿಯಿದೆ. ಆದರೆ ರಾಜ್ಯದ ಅರಣ್ಯ ಇಲಾಖೆಗಳ ದಾಖಲೆಗಳ ಪ್ರಕಾರ 1950 ರ ನಂತರ ಇಲ್ಲಿ ಹುಲಿಗಳಿದ್ದ ಯಾವುದೇ ಮಾಹಿತಿಯಿಲ್ಲ.
ಕ್ಷೇತ್ರ ಕಾರ್ಯದಲ್ಲಿ ಡಾ.ವೆಂಕಟೇಶ್ ರವರಿಗೆ ಜೊತೆಯಾದವರು ಯುವ ಸಂಚಲನದ ಚಿದಾನಂದ್ ಮತ್ತು ಹುಲಿಕುಂಟೆ ಗ್ರಾಮದ ದೇವರಾಜ್ ರವರು.
ಇದೇ ಡಿಸೆಂಬರ್ 26 ರಂದು ರಾಜ್ಯದಲ್ಲೇ ಬೇಟೆಗೆ ಹೆಸರು ವಾಪಸಂದ್ರ ಬೇಟೆ ಹಾಗು ಹುಲಿಕುಂಟೆ ಬೇಟೆ ರಂಗನಾಥಸ್ವಾಮಿಯ ಜಾತ್ರೆಯಿದೆ. ಕಾಕತಾಳೀಯವೆಂಬಂತೆ ಈಗಲೇ ಹುಲಿ ಬೇಟೆ ವೀರಗಲ್ಲು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಕೆಲವರು ಈ ಹುಲಿ ಬೇಟೆಯ ವೀರ ಗಲ್ಲನ್ನು ಗ್ರಾಮ ನಾಮ ದೊಂದಿಗೆ ತಳುಕು ಹಾಕುತ್ತಿರುವುದು ಬೇಟೆಗಾರನ ವೀರತ್ವವನ್ನು ಕೆತ್ತನೆ ಮಾಡಲ್ಪಟ್ಟಿದೆ ಅದಕ್ಕಾಗಿಯೇ ಅ ಊರಿಗೆ ಹುಲಿಕುಂಟೆ ಗ್ರಾಮ ವೆಂದು ನಾಮಕರಣ ವಾಗಿರಬಹುದು ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ