ದೊಡ್ಡಬಳ್ಳಾಪುರ:ರಾಮಾಯಣ ಮಹಾಕಾವ್ಯ ಬರೆದ ಆದಿ ಕವಿ ವಾಲ್ಮೀಕಿ ಅವರು ತಮ್ಮ ಕಾವ್ಯದಲ್ಲಿ ಕೌಟುಂಬಿಕ, ಸಾಮಾಜಿಕ ಮೌಲ್ಯಗಳನ್ನು 24 ಸಾವಿರ ಶ್ಲೋಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.
ನಗರದ ಡಾ.ರಾಜ್ಕುಮಾರ್ ಕಲಾ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಾಲ್ಮೀಕಿ ರಾಮಾಯಣದ ಮೇಲೆ ಹಲವಾರು ಕಾವ್ಯಗಳು ಕಾದಂಬರಿಗಳು ರಚನೆಯಾಗಿವೆ. ರಾಷ್ಟ್ರಕವಿ ಕುವೆಂಪು ಅವರು ಬರೆದ ರಾಮಾಯಣ ದರ್ಶನಂ ನಲ್ಲಿ ರಾಮಾಯಣವನ್ನು ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತೆ ಬರೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರಾಧ್ಯಾಪಕ ಚಿಕ್ಕಣ್ಣ ಅವರು ವಾಲ್ಮೀಕಿ ಜಯಂತಿಯನ್ನು 2004-05 ರಿಂದ ಆಚರಣೆ ಮಾಡುತ್ತಿದ್ದೇವೆ. ವಾಲ್ಮೀಕಿಯ ಮೂಲ ಹೆಸರು ರತ್ನಾಕರ ಎಂಬುದು, ಬೇಡ ಜನಾಂಗದಲ್ಲಿ ಹುಟ್ಟಿದ್ದ ರತ್ನಾಕರ ಅನ್ಯ ಮಾರ್ಗದ ಮೂಲಕ ಬದುಕು ಕಟ್ಟಿಕೊಳ್ಳುತ್ತಾನೆ, ಈ ಮದ್ಯೆ ನಾರದ ಮುನಿಗಳ ಬೇಟಿಯಾಗುತ್ತದೆ ಅವರಿಬ್ಬರ ನಡುವೆ ಚರ್ಚೆಗಳು ನಡೆದು ನಾರದ ಮುನಿಗಳ ಮಾರ್ಗದರ್ಶನದಂತೆ ಬದುಕು ಬದಲಿಸಿಕೊಳ್ಳಲು ತಪಸ್ಸು ಮಾಡುತ್ತಾನೆ.
ಆರಂಭದಲ್ಲಿ ಮರ ಎಂದು ಉಚ್ಚರಣೆ ಮಾಡುತ್ತಾನೆ ಅದು ರಾಮ ರಾಮ ಎಂದು ಬದಲಾಗುತ್ತಾ ಹೋಗುತ್ತದೆ. ರಾಮ ಎಂಬುದು ವಿಷ್ಣುವಿನ ಹೆಸರು ಎಂಬುದು ಅರಿವಿಗೆ ಬರುತ್ತದೆ. ವಾಲ್ಮೀಕಿ ತಪಸ್ಸು ಮಾಡುವಾಗ ಆತನ ಸುತ್ತ ಹುತ್ತ ಬೆಳೆಯುತ್ತಾ ರತ್ನಾಕರನನ್ನು ಆವರಿಸಿಕೊಳ್ಳುತ್ತದೆ ಆ ಹುತ್ತವನ್ನು ಭೇದಿಸಿ ಹೊರಗೆ ಬಂದ ನಂತರ ವಾಲ್ಮೀಕಿಯಾಗುತ್ತಾರೆ ಎಂದರು.
ಆದಿ ಕವಿ ವಾಲ್ಮೀಕಿ ಅವರು 24000 ಶ್ಲೋಕಗಳನ್ನು ರಚನೆ ಮಾಡಿದರು, ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರು, ವಾಲ್ಮೀಕಿ ಅವರು ಒಂದು ಜನಾಂಗಕ್ಕೆ ಸೀಮಿತರಾದವರಲ್ಲ, ಅವರು ಸರ್ವ ಜನಾಂಗದ ಕಣ್ಮಣಿ, ಮಾನವೀಯ ಮೌಲ್ಯಗಳು, ದೇಶಪ್ರೇಮ, ಪಿತೃವಾಕ್ಯ ಪರಿಪಾಲನೆ, ಸಹೋದರರ ಅನುಬಂಧದ ಹೇಗಿರಬೇಕು ಎಂಬುದರ ಬಗ್ಗೆ ತನ್ನ ಮಹಾಕಾವ್ಯದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಎಂದರು.
ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುವುದು ಜನಸಾಮಾನ್ಯರು ಅವರ ತತ್ವ ಆದರ್ಶಗಳನ್ನ ರೂಡಿಸಿಕೊಳ್ಳಲಿ ಎಂಬ ಕಾರಣಕ್ಕೆ, ಹಾಗಾಗಿ ವಾಲ್ಮೀಕಿಯ ತತ್ವಾದರ್ಶಗಳು ಮನೆಮನೆಗೆ ತಲುಪಿಸಲು ಒಂದು ತಿಂಗಳ ಕಾಲ ತಾಲ್ಲೂಕಿನಾದ್ಯಂತ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅವ್ಯವಸ್ಥೆಯ ಬಗ್ಗೆ ಅಸಮಾಧಾನ:
ಕಾರ್ಯಕ್ರಮ ಆರಂಭಕ್ಕೂ ಮುನ್ನ ಎಲ್ಲವೂ ಗೊಂದಲಕಾರಿಯಾಗಿದ್ದ ಕಾರಣಕ್ಕೆ ಪ್ರಾಧ್ಯಾಪಕ ಚಿಕ್ಕಣ್ಣ ತೀವ್ರ ಅಸಮಾಧಾನ ಹೊರಹಾಕಿದರು. ಇದು ಸರ್ಕಾರಿ ಕಾರ್ಯಕ್ರಮ ಆದರೂ ಕಾರ್ಯಕ್ರಮ ಆರಂಭಕ್ಕೂ ಮುನ್ನ ನಾಡಗೀತೆ ಹಾಡಲಿಲ್ಲ, ಆಹ್ವಾನಪತ್ರಿಕೆ ಇಲ್ಲ ಕಾರ್ಯಕ್ರಮ ಅಸ್ತವ್ಯಸ್ತದಿಂದ ಕೂಡಿದೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ಯಾರು ? ಇಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾರಿದ್ದಾರೆ ಗೊತ್ತಿಲ್ಲ, ಯಾಕಾಗಿ ಇಂತಹ ಬೇಜವಾಬ್ದಾರಿ ಕೆಲಸಗಳನ್ನು ಮಾಡಬೇಕು ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ ಸಮಾಜ ಒಗ್ಗಟ್ಟಿನಿಂದ ಇದ್ದರೆ ಸರ್ಕಾರದಿಂದ ಆಗಬೇಕಾದ ಸಮುದಾಯದ ಕೆಲಸಗಳು ಸುಲಭವಾಗಿ ನಡೆಯುತ್ತವೆ. ವಾಲ್ಮೀಕಿ ಭವನಕ್ಕೆ ಸರ್ಕಾರ ಒಂದೂವರೆ ಕೋಟಿ ಬಿಡುಗಡೆ ಮಾಡಿತ್ತು, ಅನುಧಾನ ಸಾಕಾಗದೆ ಕಾಮಗಾರಿ ಕುಂಟಿತಗೊಂಡಿದೆ, ಮತ್ತೆ 50 ಲಕ್ಷ ರೂಗಳನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಆದಷ್ಟೂ ಬೇಗ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದ್ದು ಆದಷ್ಟೂ ಬೇಗ ವಾಲ್ಮೀಕಿ ಭವನದ ಕಟ್ಟಡ ಪೂರ್ಣಗೊಳ್ಳಲಿದೆ ಎಂದರು.
ವಾಲ್ಮೀಕಿ ಗುರು ಪೀಠದ ಸ್ವಾಮೀಜಿಗಳಾದ ಕುಮಾರಸ್ವಾಮಿಗಳು ಆಶಿರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಸಮುದಾಯದ ಮಂಜುಳ, ಮುನೇಗೌಡ, ಪುಟ್ಟಣ್ಣ, ರಂಗಸ್ವಾಮಿ ಶಿವಶಂಕರ್, ಚಿಕ್ಕಚನ್ನಪ್ಪ, ಆಂಜಿನಪ್ಪ, ಶಿವಾನಂದ, ಗೋವಿಂದಪ್ಪ, ಸಂದೀಪ್ ಪಿ.ಹೆಚ್, ಘಾಟಿ ದೇವಸ್ಥಾನದ ಇಒ ಕೃಷ್ಣಪ್ಪ, ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.