ಮೈಕ್ರೋ ಫೈನಾನ್ಸ್ ಹಾವಳಿ : ಹೆಗ್ಗವಾಡಿಪುರಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ತಂಡ ಭೇಟಿ
ಚಾಮರಾಜನಗರ:ಸಂತೇಮರಹಳ್ಳಿ ಮೈಕ್ರೋ ಪೈನಾನ್ಸ್ ಕಿರುಕುಳದಿಂದ ಗ್ರಾಮ ಬಿಟ್ಟಿರುವವನ್ನು ಸಂಪರ್ಕ ಮಾಡಿ ಅವರಿಗೆ ಧೈರ್ಯ ಹೇಳುವ ಜೊತೆಗೆ ಮೈಕೋ ಫೈನಾನ್ಸ್ ಹಾವಳಿ ಕುರಿತು ವಾಸ್ತವ ವರದಿಯನ್ನು ಸರ್ಕಾರಕ್ಕೆ ಫೆ. 25 ರಂದು ಸಲ್ಲಿಸುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಹಾಸನ್ ಸತೀಶ್ ತಿಳಿಸಿದರು.
ತಾಲೂಕಿನ ಹೆಗ್ಗವಾಡಿಪುರಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸಮತಾ ಸೈನಿಕ ದಳ ಹಾಗು ವಿವಿಧ ದಲಿತ ಪರ ಸಂಘಟನೆಗಳು ಮುಖಂಡರ ತಂಡ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಮಾಲೋಚನಾ ಸಭೆ ನಡೆಸಿ, ಮೈಕ್ರೋ ಪೈನಾನ್ಸ್ ಕಿರುಕುಳದಿಂದ ಗ್ರಾಮ ಬಿಟ್ಟಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೆಗ್ಗವಾಡಿಪುರ ಗ್ರಾಮ ಇದರ ಬಗ್ಗೆ ಬೆಳಕು ಚೆಲ್ಲಿತ್ತು. ಇಲ್ಲಿನ ಅನೇಕ ಕುಟುಂಬಗಳು ಗ್ರಾಮ ತೊರೆದಿದ್ದಾರೆ. ಇನ್ನು ಸಹ ಆ ಮನೆಗಳಿಗೆ ಬೀಗ ಬಿದ್ದಿವೆ.
ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಅವರನ್ನು ವಾಪಸ್ ಕರೆಸುವ ಪ್ರಯತ್ನ ಮಾಡಬೇಕು. ಅಲ್ಲದೇ ಗ್ರಾಮದಲ್ಲಿರುವ ತಾವುಗಳು ಸಹ ಯಾರು ಹೆದರಬೇಕಾಗಿಲ್ಲ. ನಿಮಗೆ ಸಾಲ ನೀಡಿ ಹೊತ್ತಲ್ಲದ ಹೊತ್ತಿಗೆ ಬಂದರೆ, ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ. ಇಲ್ಲವೇ ನಮ್ಮ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ, ನಿಮ್ಮ ಸಹಾಯಕ್ಕೆ ಬರುತ್ತೇವೆ. ಸಾಲಕ್ಕೆ ಯಾರು ಹೆದರುವುದು ಬೇಡ. ಊರು ಬಿಡುವುದು ಬೇಡ ಎಂದು ಮನವರಿಕೆ ಮಾಡಿಕೊಟ್ಟರು.
ಸರ್ಕಾರಕ್ಕೆ ಮೂರು ಪ್ರಮುಖ ಒತ್ತಾಯಗಳು: ರಾಜ್ಯ ಸರ್ಕಾರ ಈಗಾಗಲೇ ಮೈಕ್ರೋ ಪೈನಾನ್ಸ್ ಹಾವಳಿ ತಡೆಯಲು ಸುಗ್ರಿವಾಜ್ಞೆ ತಂದಿದೆ. ಅದರೆ ಇದು ಸರ್ಕಾರದ ಕಣ್ಣೊರೆಸುವ ತಂತ್ರವಾಗಿದೆ. ಆರ್ಬಿಐ ಕಾನೂನಿನ ಅಡಿಯಲ್ಲಿ ಮೈಕ್ರೋ ಫೈನಾನ್ಸ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಜೊತೆಗೆ ಆತನ ಅದಾಯಕ್ಕಿಂತ ಹೆಚ್ಚು ಸಾಲವನ್ನು ನೀಡಿ, ವಾರದ ಬಡ್ಡಿ, ದಿನದ ಬಡ್ಡಿ, ಹಾಗೂ ತಿಂಗಳ ಬಡ್ಡಿಯನ್ನು ಹಾಕಿ ಕುಟುಂಬವನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದರು.
ಹಾಲಿ ಇರುವ ಕಾನೂನನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಇದನ್ನು ಬಲಿಷ್ಠಗೊಳಿಸಬೇಕು. ಸಾಲ ಮನ್ನಾ ಮಾಡಬೇಕು. ಸಂತ್ರಸ್ತರಿಗೆ ಸರ್ಕಾರ ಸಬ್ಸಿಡಿ ಸಾಲ ನೀಡಿ ಅವರ ಅರ್ಥಿಕ ಸಬಲೀಕರಣಕ್ಕೆ ಮುಂದಾಗಬೇಕು. ಒಂದು ವೇಳೆ ಮೈಕ್ರೋ ಫೈನಾನ್ಸ್ ನವರು ಕಿರುಕುಳಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡುವುದಾಗಿ ಸತೀಶ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ, ರಾಜ್ಯ ಸಂಚಾಲಕ ಚಳುವಳಿ ನಾಗೇಶ್, ರಾಜ್ಯ ಕಾರ್ಯದರ್ಶಿ ಮುನಿಸ್ವಾಮಿ, ಜಿಲ್ಲಾಧ್ಯಕ್ಷ ಮದ್ದೂರು ಸುರೇಶ್, ಪ್ರಧಾನ ಕಾರ್ಯದರ್ಶಿ ಅಂಬಳೆ ಮಹದೇವ್, ಹನೂರು ತಾಲೂಕು ಅಧ್ಯಕ್ಷ ಮಹದೇವಸ್ವಾಮಿ ಇತರರು ಭಾಗವಹಿಸಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ