ಬೆಂಗಳೂರು : ಬಿಬಿಎಂಪಿ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಡಿ ಗ್ರೂಪ್ ನೌಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಎಂಜಿನಿಯರ್ ಹಾಗೂ ಒಬ್ಬ ಗುಮಾಸ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇವರು ಘಟನಾ ಸ್ಥಳದಲ್ಲಿದ್ದರೂ ಗಾಯಗೊಂಡಿಲ್ಲ. ಇದರಿಂದ ಅನುಮಾನಗೊಂಡಿರುವ ಪೊಲೀಸರು ಮೂವರನ್ನೂ ಕೂಡ ವಶಕ್ಕೆ ಪಡೆದು ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಶುಕ್ರವಾರ ತಡರಾತ್ರಿಯ ವರೆಗೂ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ವಶಕ್ಕೆ ಪಡೆದ ಮೂವರು ಕೂಡ ಡಿ ಗ್ರೂಪ್ ನೌಕರರಾಗಿದ್ದಾರೆ. ಲ್ಯಾಬ್‌ನಲ್ಲಿ ಅಗ್ನಿ ಅವಘಡ ಆದಾಗ ಮೂವರು ಸ್ಥಳದಲ್ಲೇ ಇದ್ದರು. ಅಗ್ನಿ ಅವಘಡ ಸಂಭವಿಸಿದಾಗ ಮೊದಲಿಗೆ ಆಚೆಗೆ ಓಡಿ ಬಂದಿದ್ದಾರೆ. ಸದ್ಯ ಡಿ ಗ್ರೂಪ್ ನೌಕರರು ಗುಣನಿಯಂತ್ರಣ ಪ್ರಯೋಗಾಲಯಕ್ಕೆ ಹೋಗಿದ್ದೇಕೆ? ಎಂಬ ಪ್ರಶ್ನೆ ಮೂಡಿದೆ. ಆದರೆ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಹಿರಿಯ ಅಧಿಕಾರಿಗಳು ಡಿ ಗ್ರೂಪ್ ನೌಕರರಿಂದ ಕೆಲಸ ಮಾಡಿಸುತ್ತಿದ್ದರು. ಆದ್ದರಿಂದಲೇ ಈ ಮೂವರು ಅಲ್ಲಿಗೆ ಹೋಗಿದ್ದರು ಎಂಬ ಮಾಹಿತಿಯೂ ಇದೆ.

ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಸರ್ಕಾರದ ಮುಂದಾದ ಹೊತ್ತಲ್ಲಿಯೇ ಬಿಬಿಎಂಪಿ ಕಚೇರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶುಕ್ರವಾರ ಸಂಜೆ 5 ಗಂಟೆ ಹೊತ್ತಲ್ಲಿ ಬಿಬಿಎಂಪಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ಚೀಫ್ ಎಂಜಿನಿಯರ್ ಶಿವಕುಮಾರ್, ನಾಲ್ವರು ಎಂಜಿನಿಯರ್‌ಗಳು ಸೇರಿ 9 ನೌಕರರು ಗಾಯಗೊಂಡಿದ್ದಾರೆ. ದಟ್ಟ ಹೊಗೆ ಕಾಣಿಸಿಕೊಂಡ ಕೂಡಲೇ ಕಟ್ಟಡದಲ್ಲಿ ಇತರರು ಆತಂಕದಿಂದ ಹೊರಗೆ ಓಡಿದ್ರು. ಬೆಂಕಿ ಹೊತ್ತಿದ ಅರ್ಧ ಗಂಟೆ ನಂತರ ಬಂದ ಅಗ್ನಿಶಾಮಕ ಪಡೆಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಡಾಂಬರ್ ಸ್ಯಾಂಪಲ್ ಪರೀಕ್ಷೆ ವೇಳೆ ಏಕಾಏಕಿ ಈ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ಡಿಸಿಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಚೇರಿ ಬಾಗಿಲಲ್ಲಿ ಆಯಿಲ್ ಮಾದರಿ ವಸ್ತು ಕಂಡುಬಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಪ್ರಕರಣಕ್ಕೆ ರಾಜಕೀಯ ಟ್ವಿಸ್ಟ್ ಕೂಡ ಸಿಕ್ಕಿದೆ. ಈ ಘಟನೆ ಆಕಸ್ಮಿಕವಲ್ಲ. ಬಿಜೆಪಿಯವರ ಷಡ್ಯಂತ್ರ್ಯ ಎಂದು ಕಾಂಗ್ರೆಸ್ ಆಪಾದಿಸಿದೆ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗುವ ಹುನ್ನಾರ ನಡೆಸಿದೆ ಎಂದು ಟ್ವೀಟ್ ಮಾಡಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. ಆದ್ರೆ ಅವಘಡ ನಡೆದ ಜಾಗದಲ್ಲಿ ಸಿಸಿಟಿವಿಗಳು ಕೂಡ ಇಲ್ಲದೇ ಇರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಿಮಿಸಿದೆ. ಸಚಿವ ಕೆಜೆ ಜಾರ್ಜ್, ಬೈರತಿ ಸುರೇಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.2011ರಲ್ಲಿಯೂ ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು.